“ಡೆಡ್ಲಿ ಲವರ್ಸ್’”ಚಿತ್ರದ ಟ್ರೇಲರ್ ರೀಲಿಸ್
ಕ್ಯಾಚಿ ಟೈಟಲ್ ಹೊಂದಿರುವ ’ಡೆಡ್ಲಿ ಲವರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ನಾಗೇಂದ್ರ ಕಥೆ,ಚಿತ್ರಕಥೆ,ಸಂಭಾಷಣೆ,ಸಂಕಲನ, ನಿರ್ದೇಶನ ಜತೆಗೆ ಅನಘ ಎಂಟರ್ ಪ್ರೈಸಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಗೃಹ ಮಂತ್ರಿ ಪಾತ್ರ ನಿರ್ವಹಿಸಿರುವ ಲಹರಿವೇಲು ಕಾಯಾಕ್ರಮಕ್ಕೆ ಚಾಲನೆ ನೀಡಿದರು.
ಅಖಿಲ್ ಕುಮಾರ್ ನಾಯಕನಾಗಿ ಮೂರನೇ ಅವಕಾಶ. ನವಪ್ರತಿಭೆ ತನುಪ್ರಸಾದ್ ನಾಯಕಿ. ಎಸಿಪಿಯಾಗಿ ಪ್ರೇಮಾಗೌಡ, ತಂದೆಯಾಗಿ ಭಾಸ್ಕರ್, ದುರಳನಾಗಿ ವಿನೋಧ್, ಎ.ಆರ್. ಲೋಕೇಶ್ ಮುಂತಾದವರು ನಟಿಸಿದ್ದಾರೆ. ಸಂಗೀತ ಲಯಕೋಕಿಲ, ಛಾಯಾಗ್ರಹಣ ಹೆಚ್.ಎನ್. ನರಸಿಂಹಮೂರ್ತಿ, ಸಾಹಸ ವಿಕ್ರಂಸಿಂಗ್, ಹಿನ್ನಲೆ ಶಬ್ದ ಶ್ರೀಸಾಷ್ಠ, ಕಾರ್ಯಕಾರಿ ನಿರ್ಮಾಪಕ ಎ.ಆರ್.ಲೋಕೇಶ್ ಅವರದಾಗಿದೆ.
ನಂತರ ಮಾತನಾಡಿದ ಅವರು, ನಟನೆ ಮಾಡಲು ’ಅವಳೇ ನನ್ನ ಹೆಂಡ್ತಿ’ ಚಿತ್ರದ ನಿರ್ದೇಶಕ ಎಸ್.ಉಮೇಶ್ ಕಾರಣರಾಗಿದ್ದರು. ಅಂದಿನಿಂದ ನಮ್ಮಿಬ್ಬರ ಒಡನಾಟ ಚೆನ್ನಾಗಿತ್ತು. ನಾನು ವಿಧಾನಸೌದ ಒಳಗೆ ಹೋಗುತ್ತೆನೋ ತಿಳಿಯದು. ಆದರೆ ಅಲ್ಲಿ ಮಾಡಲಿಕ್ಕೆ ಸಾದ್ಯವಾಗದ್ದನ್ನು ಇದರಲ್ಲಿ ಕಾರ್ಯಗತಗೊಳಿಸಿದ್ದೇನೆ. ಜನರು ಸಿನಿಮಾ ನೋಡೋಲ್ಲ ಅನ್ನೋದು ತಪ್ಪು.
ಸಾಂಸಾರಿಕ, ಕಾದಂಬರಿ ಚಿತ್ರಗಳನ್ನು ಮರೆತು ಹೋಗಿದ್ದೇವೆ. ಹೊಸತನದ ಕಥೆ, ಅದಕ್ಕೆ ತಕ್ಕಂತೆ ನಿರ್ದೇಶಕರು, ನಿರ್ಮಾಪಕರು ಸಿಕ್ಕಿ ಉತ್ತಮ ಚಿತ್ರ ನೀಡಿದರೆ ಎಲ್ಲರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ. ನಮ್ಮಲ್ಲೆ ಕೆಲವರು ಉದ್ಯಮವನ್ನು ಹಾಳು ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈರೆಸಿ ಮೇಲೆ ನಟ್ಟು,ಬೋಲ್ಟು ಟೈಟ್ ಮಾಡಿದಾಗ ಮಾತ್ರ ಚಿತ್ರರಂಗ ಉಳಿಯುತ್ತದೆ. ಸುಮ್ಮನೆ ಕಲಾವಿದರನ್ನು ದೋಷಿಸುವುದು ಸರಿಯಲ್ಲವೆಂದು ಸಚಿವರ ಹೇಳಿಕೆಗೆ ಟಾಂಗ್ ಕೊಟ್ಟ ಲಹರಿ ವೇಲು ತಂಡಕ್ಕೆ ಶುಭ ಹಾರೈಸಿದರು.
ಗುರುಗಳಾದ ಎಸ್.ಉಮೇಶ್ ಬಳಿ ಕೆಲಸ ಕಲಿತುಕೊಂಡು ’ಡೆಡ್ಲಿ ಲವರ್ಸ್’ಗೆ ಆರು ಜವಬ್ದಾರಿಗಳನ್ನು ಹೊತ್ತುಕೊಂಡಿದ್ದೇನೆ. ಪ್ರೇಮಿಗಳಿಬ್ಬರು ಭೂಗತಲೋಕಕ್ಕೆ ಎಂಟ್ರಿಕೊಟ್ಟು ಖಳನಾಯಕನಿಗೆ ಚಳ್ಳೆಹಣ್ಣು ತಿನ್ನಿಸಿ ಡ್ರಗ್ಸ್ ಹಣವನ್ನು ಕದಿಯುತ್ತಾರೆ. ವಿಷಯ ಹೋಂ ಮಿನಿಸ್ಟರ್ಗೆ ತಿಳಿದು ಕೇಸನ್ನು ಎಸಿಪಿಗೆ ವಹಿಸುತ್ತಾರೆ.
ಅಷ್ಟಕ್ಕೂ ಲವರ್ಸ್ಗಳೂ ಡೆಡ್ಲಿ ಆಗಲು ಕಾರಣವೇನು? ಇವರಿಬ್ಬರ ಹಿನ್ನಲೆ ಏನು? ಅಂತಿಮವಾಗಿ ದುಡ್ಡು ಯಾರಿಗೆ ದಕ್ಕುತ್ತದೆ? ಖಳನು ಸೇಡು ತೀರಿಸಿಕೊಂಡನಾ? ಅಥವಾ ಪೋಲೀಸರು ಎನ್ಕೌಂಟರ್ ಮಾಡಿದರಾ? ಇಂತಹ ಕುತೂಹಲ ಸನ್ನಿವೇಶಗಳು ಚಿತ್ರದಲ್ಲಿದೆ. ಮಂಚನ ಡ್ಯಾಂ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರ ಸಹಕಾರಬೇಕೆಂದು ನಾಗೇಂದ್ರ ಕೋರಿದರು.
ಇಲ್ಲಿಯವರೆಗೂ ಹದಿನೆಂಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಶಾಂತ್ ನಾಯಕ್ ಹೊಸ ಅನುಭವ ಎನ್ನುವಂತೆ ’ತಾಂಡವ ಮೂವಿ ಮೇಕರ್ಸ್’ ಸಂಸ್ಥೆ ಹುಟ್ಟುಹಾಕಿ, ಇದರ ಮೂಲಕ ವಿತರಣೆ ಮಾಡುತ್ತಿದ್ದು, ಸುಮಾರು 50-60 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ. ಸುಂದರ ಸಮಯದಲ್ಲಿ ಬಾ.ಮ.ಹರೀಶ್. ಬಾ.ಮ.ಗಿರೀಶ್, ನಟ ಅಮಿತ್ ಉಪಸ್ತಿತರಿದ್ದರು.