“KCL” ಕ್ರಿಕೆಟ್ ಟೂರ್ನಿಯ ಮೊದಲ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಚಾಲನೆ
ಸ್ಯಾಂಡಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಏಪ್ರಿಲ್28 ರಿಂದ ದುಬೈನ ಶಾರ್ಜಾ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ. ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಸ್ಯಾಂಡಲ್ ವುಡ್ ನಟನಟಿಯರನ್ನು ಹಾಗೂ ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಕಂಡು ಸಂಭ್ರಮಿಸುವಂತೆ ಮಾಡುವ ಸಲುವಾಗಿ ಕರ್ನಾಟಕ ಸೆಲೆಬ್ರಿಟಿ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
ಮೈಸೂರು ನಗರದ ಖಾಸಗಿ ಹೋಟೆಲ್ ನಲ್ಲಿ ತಂಡದ ಆಟಗಾರರ ಹರಾಜು ಪ್ರಕ್ರಿಯೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಮೊದಲು ಶಾಸಕ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಟರಾದ ಡಾರ್ಲಿಂಗ್ ಕೃಷ್ಣ, ರವಿ ಚೇತನ್, ನಿರ್ದೇಶಕ ತರುಣ್ ಸುಧೀರ್, ಪವನ್ ಒಡೆಯರ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿವಾಸಿ ಕನ್ನಡಿಗ ಮಯೂರ್ ಮಾಸ್ಟರ್ ಅವರು ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಒಂದುಗೂಡಿ ಕರ್ನಾಟಕ ಸೆಲೆಬ್ರಿಟಿ ಲೀಗ್(KCL) ಸೀಸನ್ ೧ ಆಯೋಜಿಸುತ್ತಿದ್ದಾರೆ. ಏಪ್ರಿಲ್ 28 ರಿಂದ ಮೇ 3 ರವರೆಗೂ ದುಬೈನ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಮಾತ್ರ ಭಾಗವಹಿಸಲಿದ್ದಾರೆ. ಅವರಿಗಾಗಿಯೇ ಈ ಟೂರ್ನಿ ಆಯೋಜಿಸಲಾಗಿದೆ. ದುಬೈನಲ್ಲಿರುವ ಸುಮಾರು ಹತ್ತುಸಾವಿರ ಕನ್ನಡಿಗರನ್ನು ಒಂದುಗೂಡಿಸುವುದೇ “ಕೆ.ಸಿ.ಎಲ್” ನ ಉದ್ದೇಶ ಎಂದರು.
ಟೂರ್ನಿಯಲ್ಲಿ ಹತ್ತು ತಂಡಗಳು ಭಾಗವಹಿಸಲಿದೆ. ಹನ್ನೆರಡು ಓವರ್ ಗಳ ಪಂದ್ಯ ಇದ್ದಾಗಿದ್ದು, ಎರಡು ಗುಂಪಿನಲ್ಲಿ ತಲಾ ಐದು ತಂಡಗಳಿದ್ದು, ಪ್ರತಿ ತಂಡ ನಾಲ್ಕು ಪಂದ್ಯಗಳನ್ನಾಡಲಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ನಾಕೌಟ್ ಪಂದ್ಯ ಆಡಲಿದೆ. ಪಂದ್ಯದ ನೇರಪ್ರಸಾರವೂ ಇರಲಿದೆ. ಲೂಸ್ ಮಾದ ಯೋಗಿ, ಡಾರ್ಲಿಂಗ್ ಕೃಷ್ಣ, ತರುಣ್ ಸುಧೀರ್ ಸೇರಿದಂತೆ ಹಲವರು ತಂಡದ ನಾಯಕರಾಗಲಿದ್ದಾರೆ. ಇಂದು ತಂಡದ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದರು.
ಅನಿವಾಸಿ ಕನ್ನಡಿಗ ಸಿರಾಜ್ ಮಾತನಾಡಿ, ಕೋವಿಡ್ ಗೂ ಮುನ್ನ ದುಬೈನಲ್ಲಿ ನಮ್ಮ ಅನಿವಾಸಿ ಕನ್ನಡಿಗರ ಸಂಘ ಹುಟ್ಟಿಕೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಉದ್ದೇಶ ನಮ್ಮದಾಗಿತ್ತು.ಕೋವಿಡ್ ಸಮಯದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ವಿಮಾನ ಸೇವೆ ಸೇರಿದಂತೆ ಬೇರೆಬೇರೆ ರೀತಿಯಲ್ಲಿ ನಮ್ಮ ಸಂಘ ನೆರವಾಗಿ ನಿಂತಿದೆ. ಜೊತೆಗೆ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ ಒಂದು ದೊಡ್ಡ ಕಾರ್ಯಕ್ರಮ ಮಾಡಿ ಎಲ್ಲರನ್ನೂ ಒಂದೆಡೆ ಸೇರಿಸಲು ಸಾಧ್ಯವಾಗಿರಲಿಲ್ಲ. ಇಂದು ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿರುವುದರಿಂದ ಕನ್ನಡದ ಸೆಲೆಬ್ರಿಟಿಗಳನ್ನು ದುಬೈಗೆ ಕರೆಸಲು ಈ ಟೂರ್ನಿ ಮಾಡುತ್ತಿದ್ದೇವೆ. ಇದರಿಂದ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ದುಬೈನಲ್ಲಿನ ಕನ್ನಡಿಗರಿಗೆ ಸಿಗಲಿದೆ ಎಂದರು.
ದುಬೈನಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಒಂದು ಕಡೆ ಸೇರಿ ಸಂಭ್ರಮಿಸಬೇಕು. ಈ ಕ್ರಿಕೆಟ್ ಲೀಗ್ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೇರೆಬೇರೆ ಕ್ರೀಡೆಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು ಅನಿವಾಸಿ ಕನ್ನಡಿಗ ಶ್ರೀನಿಧಿ.