Cini NewsSandalwood

ಗೆಲುವಿನ ಹೆಜ್ಜೆಯಲಿ “ಹೆಜ್ಜಾರು”

ಹೊಸತನದ ಆಲೋಚನೆ, ವಿಭಿನ್ನ ಪ್ರಯತ್ನಗಳ ಚಿತ್ರಗಳಿಗೆ ಪ್ರೇಕ್ಷಕರು ಮೆಚ್ಚುಗೆಯನ್ನು ಸೂಚಿಸುತ್ತಾರೆ. ಗೆಲುವನ್ನ ನೀಡುತ್ತಾರೆ ಎಂಬ ನಿದರ್ಶನಕ್ಕೆ ಸಾಕ್ಷಿಯಾದಂತ ಚಿತ್ರ ಹೆಜ್ಜಾರು. ಇಡೀ ತಂಡದ ಶ್ರಮದ ಫಲವಾಗಿ ಹೊರಬಂದಂತಹ “ಹೆಜ್ಜಾರು” ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿರುವ ಖುಷಿಯನ್ನು ಹಂಚಿಕೊಳ್ಳುವುದರ ಜೊತೆಗೆ ಮಾಧ್ಯಮದವರ ವಿಮರ್ಶೆ , ರೇಟಿಂಗ್ಸ್ ಹಾಗೂ ಚಿತ್ರ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಯ ವಿಡಿಯೋಗಳನ್ನು ಪ್ರದರ್ಶಿಸುವ ಮೂಲಕ ರಾಮ್ ಜೀ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಯಿತು.

ನಿರ್ದೇಶಕ ಹರ್ಷಪ್ರಿಯ ಮೊದಲಿಗೆ ಮಾತನಾಡುತ್ತಾ ನನ್ನ ಮೊದಲ ಚಿತ್ರಕ್ಕೆ ಇಂತಹ ಒಂದು ಗೆಲುವು ಸಿಕ್ಕಿರುವುದು ಬಹಳ ಸಂತೋಷವನ್ನು ತಂದಿದೆ. ಇದಕ್ಕೆ ಕಾರಣರಾದ ನನ್ನ ನಿರ್ಮಾಪಕ ರಾಮ್ ಜೀ ಗೆ ನಾನು ಸದಾ ಋಣಿ. ನನ್ನ ಮೇಲೆ ನಂಬಿಕೆ ಇಟ್ಟು ಈ ಚಿತ್ರವನ್ನು ನೀಡಿದ್ದರು. ಅವರಿಗಾಗಿ ನಾನು ಒಂದು ವಿಟಿಯನ್ನು ಪ್ರೆಸೆಂಟ್ ಮಾಡ್ತೀನಿ ಎಂದು ರಾಮ್ ಜಿ ಸೀರಿಯಲ್ ಜರ್ನಿಯಾ ದೃಶ್ಯಾವಳಿಗಳನ್ನು ಪ್ರದರ್ಶಿಸಿದರು. ತದನಂತರ ಚಿತ್ರದಲ್ಲಿ ದುಡಿದಂತ ಕಲಾವಿದರು ಹಾಗೂ ತಂತ್ರಜ್ಞಾನರ ಬಗ್ಗೆ ಮಾಹಿತಿ ನೀಡುತ್ತಾ ಅವರೊಟ್ಟಿಗೆ ಚಿತ್ರೀಕರಣದಲ್ಲಿ ಎದುರಿಸಿದಂತಹ ಅನುಭವಗಳನ್ನು ಹಂಚಿಕೊಂಡರು.

ಇನ್ನು ನಿರ್ಮಾಪಕ ರಾಮ್ ಜೀ ಮಾತನಾಡುತ್ತಾ ಪತ್ರಕರ್ತರು, ದೃಶ್ಯಮಾಧ್ಯಮ , ಸಾಮಾಜಿಕ ಜಾಲತಾಣದವರ ಪವರ್ ಏನು ಎಂದು ತಿಳಿಯಿತು. ನಮ್ಮ ಚಿತ್ರ ನೋಡಿ ನೀವು ಕೊಟ್ಟಂತ ವಿಮರ್ಶೆಯಿಂದ ಇವತ್ತು ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಅದರ ಅನುಭವ ನನಗೆ ಚಿತ್ರಮಂದಿರದಲ್ಲಿ ಸಿಕ್ಕಿತು.

ಮೊದಲಿಗೆ ನಿಮ್ಮೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾ, ಇದು ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ. ನಾನು ಬಹಳಷ್ಟು ಸೀರಿಯಲ್ ನಿರ್ದೇಶನ , ನಿರ್ಮಾಣ ಮಾಡಿದ್ದರು ಸಿನಿಮಾ ನಿರ್ಮಾಣ ನನ್ನ ಮೊದಲ ಅನುಭವ ಇಲ್ಲಿಂದ ಕಲಿಕೆ ಆರಂಭಿಸಿದ್ದೇನೆ. ನನ್ನದೇ ಆಡಿಯೋ , ವಿತರಣಾ ಸಂಸ್ಥೆಯ ಮೂಲಕ ಕೆಲಸವನ್ನು ಆರಂಭಿಸಿದ್ದೇನೆ.

ಒಂದಷ್ಟು ಜನರ ಹಿಡಿತದಲ್ಲಿ ಸಿಲುಕಿರುವ ಸಿನಿಮಾ ವಿತರಣಾ ಕಾರ್ಯದಿಂದ ಹೊರಬಂದು ನಾನೇ ರಿಲೀಸ್ ಮಾಡಿ ಲಾಭ ನಷ್ಟದ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ನನ್ನ ಸಿನಿಮಾ , ನನ್ನ ಆಡಿಯನ್ಸ್ ಯಾರು ಅಂತ ಗೊತ್ತು. ಅಂತಹ ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಪ್ರದರ್ಶನ ಮಾಡುತ್ತಿದ್ದೇನೆ. ಹೊಸ ನಿರ್ಮಾಪಕರಿಗೆ ವಿತರಣಾ ವಿಚಾರವಾಗಿ ಸಹಕಾರ ನೀಡುತ್ತೇನೆ. ಸಿನಿಮಾ ಈಗ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

ವಿಶೇಷವಾಗಿ ನಮ್ಮ ಚಿತ್ರದ ಮಲಯಾಳಂ ಹಕ್ಕನ್ನ ಪಡೆಯಲು ಬಂದಿರುವುದು ಸಂತೋಷದ ವಿಷಯ. ಇನ್ನು ಟಿವಿ ಬಿಸಿನೆಸ್ ವಿಚಾರವಾಗಿ ಸೇಫ್ ಆಗಿದ್ದೇನೆ. ಮೊದಲ ಪ್ರಯತ್ನದಲ್ಲಿ ಯಶಸ್ವಿ ಸಿಕ್ಕಿದೆ. ಇನ್ನು ಮುಂದೆ ನನ್ನ ಸಂಸ್ಥೆಯಿಂದ ಚಿತ್ರಗಳನ್ನು ನಿರಂತರವಾಗಿ ಮಾಡುತ್ತೇನೆ. ನನ್ನ ನಿರ್ದೇಶನದ ಚಿತ್ರದ ಬಗ್ಗೆ ಕೂಡ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಈ ಹೆಜ್ಜಾರು ಚಿತ್ರ ತಂಡದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಚಿತ್ರಕ್ಕೆ ಪ್ರೋತ್ಸಾಹ ಬೆಂಬಲ ಹೀಗೆ ಮುಂದುವರೆಯಲಿ ಎಂದು ಕೇಳಿಕೊಂಡರು.

ನಾಯಕ ನಟರಾದ ಭಗತ್ ಆಳ್ವಾ ಮಾತನಾಡುತ್ತಾ ಭಾವುಕರಾಗಿ ನಿರ್ದೇಶಕರ ಜೊತೆಗಿನ ಒಡನಾಟವನ್ನು ಹೇಳುತ್ತಾ , ನನ್ನಂತ ಹೊಸಬನ ಮೇಲೆ ನಂಬಿಕೆ ಇಟ್ಟು ಚಿತ್ರ ನಿರ್ಮಿಸಿ ಮೊದಲ ಚಿತ್ರದಲ್ಲೇ ನನಗೆ ಯಶಸ್ಸನ್ನ ತಂದು ಕೊಟ್ಟಂತಹ ನಿರ್ಮಾಣ ಸಂಸ್ಥೆಗೆ ನಾನು ಸದಾ ಋಣಿ , ನಿರ್ಮಾಪಕ ರಾಮ್ ಜೀ ರನ್ನು ಮರೆಯುವುದಿಲ್ಲ , ನನಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.

ಅದೇ ರೀತಿ ನಾಯಕಿ ಶ್ವೇತಾ ಡಿಸೋಜ ಕೂಡ ಈ ಗೆಲುವು ನನಗೆ ಬಹಳ ಖುಷಿ ತಂದುಕೊಟ್ಟಿದೆ. ಅವಕಾಶಕೊಟ್ಟ ನಿರ್ದೇಶಕ , ನಿರ್ಮಾಪಕರಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದರು. ವಿಶೇಷವಾಗಿ ಖಳನಾಯಕನ ಪಾತ್ರ ನಿರ್ವಹಿಸಿರುವ ನವೀನ್‌ಕೃಷ್ಣ , ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಧಾರಿ ಮುನಿರಾಜು (ಮುನಿ ) , ವಿಲನ್ ಪಾತ್ರದಾರಿ ವಿನೋದ್ ಭಾರತಿ , ಸಂಕಲನಕಾರ ಅಜಿತ್ ಡ್ರಾಕುಲಾ , ನೃತ್ಯ ನಿರ್ದೇಶಕ ಭಜರಂಗಿ ಮೋಹನ್ , ಕಾರ್ಯಕಾರಿ ನಿರ್ಮಾಪಕ ಗಿರೀಶ್ ಕನಕಪುರ, ಛಾಯಾಗ್ರಹಕ ಅಮರ ಗೌಡ ವೇದಿಕೆ ಮೇಲಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಬಾಲರಾಜ್ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು, ಯುವ ಪ್ರತಿಭೆಗಳು ಉತ್ತಮವಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ. ಎನ್. ನಿರ್ಮಾಣ, ಸುನಿತಾ ಟಿ ಆರ್ ಸಹಕಾರದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆವಿದೆ.

ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸ್ಟೋರಿ ಸಿನಿಮಾ ಇದಾಗಿದ್ದು, ಪ್ರೇಕ್ಷಕರ ಹಾಗೂ ವಿಮರ್ಶೆಯಿಂದ ಉತ್ತಮ ಪ್ರಶಂಸೆ ಸಿಕ್ಕಿದ್ದು , ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇನ್ನೂ ಎರಡನೇ ವಾರ ಕೂಡ ಚಿತ್ರ ಮತ್ತಷ್ಟು ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇದೆಯಂತೆ. ಉತ್ತಮ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯುವಂತಾದರೆ ಚಿತ್ರಂಗಕ್ಕೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ.

error: Content is protected !!