Cini NewsSandalwood

ಭಾವನಾತ್ಮಕ ಸಂಬಂಧದ “ಲಕ್ಷ್ಮಿ “ ಕಿರುಚಿತ್ರದ ಪ್ರದರ್ಶನ

ಪುರೋಹಿತ್ ಪ್ರೊಡಕ್ಷನ್ಸ್ ಮೂಲಕ ಅಭಿಜಿತ್ ಪುರೋಹಿತ್ ಅವರ ನಿರ್ಮಾಣದ ಲಕ್ಷ್ಮಿ ಎಂಬ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ನಡೆಯಿತು. ಇದರಲ್ಲಿ ಅಭಿಜಿತ್, ಒಬ್ಬ ಮಗ ತನ್ನ ತಾಯಿಯ ಕನಸನ್ನು ನನಸು ಮಾಡುವ ಹಾಗೂ ಪೂರ್ವಜರ ಸಂಸ್ಕೃತಿ, ಆಚಾರ ವಿಚಾರಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇದು ಅಭಿಜಿತ್ ಅವರ ತಾಯಿಯ ನಿಜವಾದ ಕಥೆ. ಇಲ್ಲಿ ಲಕ್ಷ್ಮಿಕಂಭದ ಪ್ರತಿರೂಪವಾಗಿ ಹಿರಿಯನಟಿ ಪದ್ಮಜಾರಾವ್ ಅಭಿಯಿಸಿದ್ದಾರೆ.

68 ವರ್ಷದ ನಳಿನಿ ಪುರೋಹಿತ್ ಹಾಗೂ ಆಕೆಯ ಮನೆಯ ಲಕ್ಷ್ಮಿಕಂಬದ ನಡುವಿನ ಭಾವನಾತ್ಮಕ ಸಂಬಂಧ, ಅವರಿಬ್ಬರ ಮಧ್ಯೆ ಆಗುವ ಮನದ ಮಾತುಗಳು, ಆಕೆಯ ಚಿತ್ರಕಲೆಯ ಕನಸನ್ನು ನನಸು ಮಾಡುವ ಮಗ ಇದಿಷ್ಟನ್ನು ಅರ್ಧ ಗಂಟೆಯ ಈ ಕಿರುಚಿತ್ರದಲ್ಲಿ ನಿರ್ದೇಶಕ‌ ಹಾಗೂ ನಿರ್ಮಾಪಕರೂ ಆದ ಅಭಿಜಿತ್ ಮನಮುಟ್ಟುವ ಹಾಗೆ ಹೇಳಿದ್ದಾರೆ.

ನಳಿನಿ ಅವರ ಮಗ ಪೂರ್ವಜರ ಮನೆ ಕೆಡವಿ, ಅಲ್ಲಿ ಗೋಡೌನ್ ಕಟ್ಟಿಸೋ ನಿರ್ಧಾರ ಮಾಡುತ್ತಾನೆ. ತಾನು ಬಾಳಿಬದುಕಿದ ಆ ಮನೆಗೆ ಕೊನೆಯಬಾರಿ ನಳಿನಿ ಭೇಟಿ ನೀಡಿದಾಗ ಅಡುಗೆಮನೆಯಲ್ಲಿ ಒಬ್ಬ ಮಹಿಳೆ ಭೇಟಿಯಾಗಿ ನಳಿನಿಯೇ ತಿಳಿದಿರದ ಕೆಲ ಘಟನೆಗಳನ್ನು ವಿವರಿಸುತ್ತಾಳೆ.

ಆ ಮಹಿಳೆ ಯಾರು? ಆ ಭೇಟಿಯಿಂದ ನಳಿನಿ ಬದುಕಲ್ಲೇನು ಬದಲಾವಣೆಯಾಯ್ತು ಅನ್ನೋದೇ ಲಕ್ಷ್ಮಿ ಕಿರುಚಿತ್ರದ ಕಥೆ. ಪ್ರದರ್ಶನದ ನಂತರ ನಟಿ ಪದ್ಮಜಾರಾವ್ ಮಾತನಾಡಿ ಅಭಿ ಈ ಕಥೆ ಹೇಳಿದಾಗ ನನಗೆ ಇಷ್ಟವಾದ ಮೂರು ಅಂಶಗಳೆಂದರೆ, ತಾಯಿಮಗನ ಪ್ರೀತಿ, ಎಮೋಷನಲ್ ಆದ ಕಥೆ ಜೊತೆಗೆ ನನಗೂ ಒಂದು ಚಿತ್ರ ನಿರ್ದೇಶನ ಮಾಡಲು ಪ್ರೇರೇಪಿಸಿದ್ದು. ಯಾವಾಗಲೂ ಹಣವೇ ಮುಖ್ಯವಾಗಲ್ಲ ಎನ್ನುವುದು ತಿಳಿಯಿತು ಎಂದು ಹೇಳಿದರು.

ವೇದಿಕೆಯಲ್ಲಿ ಮಾತನಾಡುವಾಗಲೇ ತನ್ನ ಕನಸನ್ನು ನನಸು ಮಾಡಿದ ಮಗನ ಪ್ರಯತ್ನಕ್ಕೆ ನಳಿನಿ ಪುರೋಹಿತ್ ಅವರ ಕಣ್ಣಲ್ಲಿ ಆನಂದಭಾಷ್ಪ ಧಾರೆಯಾಯಿತು. ಅಭಿಜಿತ್ ಪುರೋಹಿತ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ. ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ, ಪ್ರಣವ್ ಅಯ್ಯಂಗಾರ್ ಅವರ ಸಂಗೀತ, ಸ್ನೇಹ ತೆಗ್ಗಿಹಾಳ್ ಅವರ ಸಾಹಿತ್ಯ ಈ ಕಿರುಚಿತ್ರಕ್ಕಿದೆ. ಹಿರಿಯನಟಿ ಪದ್ಮಜಾ ರಾವ್ , ನಳಿನಿ ಪುರೋಹಿತ್, ಮಾಸ್ಟರ್ ವೇದ್ ಪುರೋಹಿತ್, ಶಾರದಾ ಜಾದೂಗರ್, ರಾಮ ರಾವ್, ಎಂ.ಆರ್. ಕಮಲಾ, ಬೇಬಿ ತನಿಷ್ಕಾಗೌಡ, ಬೇಬಿ ತ್ರಿಶಿಕಾ ಗೌಡ, ದೀಪ್ತಿ ಪುರೋಹಿತ್, ಅಭಿಜಿತ್ ಪುರೋಹಿತ್,ಎಲ್.ಡಿ. ವೆಂಕಟನಾರಾಯಣಾಚಾರ್ಯ ಸ್ವಾಮಿ ಪ್ರಮುಖ ತಾರಾಗಣದಲ್ಲಿದ್ದಾರೆ.

error: Content is protected !!